ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಶಿಕ್ಷಕ ಅಂದರ್!

ಕುಶಾಲನಗರ: ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಾಲಾ ಶಿಕ್ಷಕರೊಬ್ಬರು ಬಂಧನಕ್ಕೊಳಗಾಗಿದ್ದಾರೆ.ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಯೋಗೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲು ಸಮೀಪದ ಬೇತು ಸ.ಹಿ.ಪ್ರಾ.ಶಾಲಾ ಶಿಕ್ಷಕ ಕೆ.ಜಿ.ನಾಗೇಂದ್ರ ಎಂಬವರೇ ಬಂಧಿಸಲ್ಪಟ್ಟವರಾಗಿದ್ದಾರೆ.ಕುಶಾಲನಗರ ನಗರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯ ಪತಿಯಾಗಿರುವ ನಾಗೇಂದ್ರ ತಾನು ವಾಸವಿರುವ ಪೊಲೀಸ್ ವಸತಿಗೃಹದ ಪಕ್ಕದ ವಸತಿಗೃಹದಲ್ಲಿ ವಾಸವಿದ್ದ ಪೊಲೀಸ್ ಪೇದೆಯೊಂದಿಗೆ ಕಲಹ ಮಾಡಿಕೊಂಡಿದ್ದರೆನ್ನಲಾಗಿದೆ. ಈ ಬಗ್ಗೆ ವಿಚಾರಿಸಲು ನವೆಂಬರ್ ತಿಂಗಳಲ್ಲಿ ಠಾಣೆಗೆ ಬರ ಹೇಳಿದ್ದ ಸಂದರ್ಭ ಕುಶಾಲನಗರ ಠಾಣೆಗೆ ತೆರಳಿದ್ದ ನಾಗೇಂದ್ರ ಅಲ್ಲಿಯೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರೆಂದು ಹೇಳಲಾಗಿದೆ.ಇದೇ ಸಂದರ್ಭ ಮೊಬೈಲ್ ನೋಡುತ್ತಾ, ಕರ್ತವ್ಯ ನಿಮಿತ್ತ ನಗರ ಠಾಣೆಗೆ ಆಗಮಿಸಿದ ಗ್ರಾಮಾಂತರ ಠಾಣಾ ಸಿಬ್ಬಂದಿ ಯೋಗೇಶ್ ಅವರ ಮೇಲೆ ‘ಮೊಬೈಲ್’ನಲ್ಲಿ ವಿಡಿಯೋ ಮಾಡುತ್ತಿದ್ದೀಯ’ ಎಂದು ಆಕ್ಷೇಪಿಸಿ ಶಿಕ್ಷಕ ನಾಗೇಂದ್ರ ಹಲ್ಲೆ ನಡೆಸಿದ್ದರೆನ್ನಲಾಗಿದೆ.ಈ ಬಗ್ಗೆ ಪೊಲೀಸ್ ಸಿಬ್ಬಂದಿ ಯೋಗೇಶ್ ನ. 29 ರಂದು ದೂರು ನೀಡಿದ್ದರು. ಆದರೆ ತಲೆಮರೆಸಿಕೊಂಡಿದ್ದ ಶಿಕ್ಷಕ ನಾಗೇಂದ್ರ, ಅಯ್ಯಪ್ಪ ಸ್ವಾಮಿ ವೃತ ಆರಂಭಿಸಿ ಮಡಿಕೇರಿಯಲ್ಲಿ ಸ್ನೇಹಿತರೊಂದಿಗೆ ತಂಗಿದ್ದರು ಎನ್ನಲಾಗಿದೆ. ಭಾನುವಾರ ಕುಶಾಲನಗರಕ್ಕೆ ನಾಗೇಂದ್ರ ಆಗಮಿಸಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆದಿದ ಕುಶಾಲನಗರ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಜಯಕಿರಣ ಪತ್ರಿಕೆ ಓದಿರಿ.