ಸಿದ್ದರಾಮಯ್ಯ ನಿವಾಸ ಸೀಲ್ ಡೌನ್! ಪತ್ರಕರ್ತರಿಗೆ ಕ್ವಾರಂಟೈನ್ ಆಗಲು ಸೂಚನೆ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಧೃಡಪಟ್ಟಿರುವ ಹಿನ್ನೆಲೆಯಲ್ಲಿ ಅವರ ಮೈಸೂರು ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ. ಇತ್ತೀಚಿಗೆ ಮೈಸೂರಿಗೆ ಆಗಮಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಟಿ.ಕೆ ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಸಿದ್ದರಾಮಯ್ಯ ಅವರ ನಿವಾಸದ ಸುತ್ತಮುತ್ತ ಸೀಲ್ ಡೌನ್ ಮಾಡಿದ್ದು 14 ದಿನಗಳು ಸಿದ್ದರಾಮಯ್ಯ ಅವರ ನಿವಾಸವನ್ನು ಸಂಪೂರ್ಣ ಬಂದ್ ಆಗಲಿದೆ. ಅವರ ನಿವಾಸದ ಸುತ್ತಮುತ್ತ ಪಾಲಿಕೆ ವತಿಯಿಂದ ಔಷಧಿ ಸಿಂಪಡಣೆ ಮಾಡಲಾಗಿದೆ.
ಸಿದ್ದರಾಮಯ್ಯ ಅವರು ಜು.30ರಂದು ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂವಾದದಲ್ಲಿ ಮೈಸೂರಿನ ಹಲವು ಮಂದಿ ವರದಿಗಾರರು, ಛಾಯಾಗ್ರಾಹಕರು ಪಾಲ್ಗೊಂಡಿದ್ದರು. ಈ ನಡುವೆ ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರು ಸೆಲ್ಫ್ ಕ್ವಾರಂಟೈನ್ ಆಗುವಂತೆ ಕೋರಿ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಅವರು ಆಡಿಯೋ ಸಂದೇಶ ರವಾನಿಸಿದ್ದಾರೆ. ಜು.31ರಂದು ಮಂಡ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಹೀಗಾಗಿ ಮಂಡ್ಯ ಪತ್ರಕರ್ತರ ವಲಯದಲ್ಲೂ ಕೊರೊನಾ ವೈರಸ್ ಭೀತಿ ಎದುರಾಗಿದೆ.