ಬೊಮ್ಮಾಯಿ ಕುರಿತು `ಏಕವಚನ’ ಹೇಳಿಕೆಗೆ ಡಿಕೆಶಿ ವಿಷಾದ!

ಬೆಂಗಳೂರು: ಇತ್ತೀಚೆಗೆ ನಡೆದ ಬೆಂಗಳೂರು ಗಲಭೆ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಏಕವಚನ ಪ್ರಯೋಗಿಸಿದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ. ಗೃಹಸಚಿವರ ಬಗ್ಗೆ, ಅವರ ಸ್ಥಾನಮಾನದ ಬಗ್ಗೆ ನನಗೆ ಗೌರವವಿದೆ. ಬೇಕೆಂದೇ ಏಕವಚನ ಬಳಸಿಲ್ಲ. ಮಾತಾಡುವ ಭರದಲ್ಲಿ ಬಾಯಿತಪ್ಪಿ ಏಕವಚನ ಬಳಕೆಯಾಗಿದೆ ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ್ದ ಡಿಕೆ ಶಿವಕುಮಾರ್, ನಮ್ಮ ಶಾಸಕ ಶ್ರೀನಿವಾಸಮೂರ್ತಿ ಗಲಭೆಯಿಂದ ತೊಂದರೆಗೆ ಒಳಗಾಗಿದ್ದಾರೆ. ಆದರೆ ಬಿಜೆಪಿಯವರು ಇಂತಹ ಹೇಳಿಕೆ ನೀಡಿ ಎಂದು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಗಲಭೆಗೆ ಕಾಂಗ್ರೆಸ್ನವರ ಆಂತರಿಕ ಭಿನ್ನಾಭಿಪ್ರಾಯ ಕಾರಣ ಎಂದು ಬಸವರಾಜ ಬೊಮ್ಮಾಯಿ ಆರೋಪಿಸುತ್ತಿದ್ದಾರೆ. ಅವನು ಯಾರು? ಅವನು ಅಥಾರಿಟಿನಾ? ಸಬ್ ಇನ್ಸ್ಪೆಕ್ಟರಾ? ಆಯೋಗನಾ? ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.