ಉಗ್ರವಾದಿಗಳ ವಿಧ್ವಂಸಕ ಸಂಚು ವಿಫಲಗೊಳಿಸಿದ ಭದ್ರತಾ ಪಡೆ

ಶ್ರೀನಗರ: ಕಾಶ್ಮೀರದಲ್ಲಿ ದೊಡ್ಡ ವಿಧ್ವಂಸಕ ದಾಳಿ ನಡೆಸುವ ಉಗ್ರರ ಯೋಜನೆಯನ್ನು ಭಾರತದ ಭದ್ರತಾ ಪಡೆಗಳು ವಿಫಲಗೊಳಿಸಿದ್ದಾರೆ. ಈ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಪಟ್ಟನ್ ವ್ಯಾಪ್ತಿಯ ಟಾಪರ್ ಗ್ರಾಮದ ರಸ್ತೆ ಬಳಿ ಸ್ಫೋಟಕ ವಸ್ತು ಪತ್ತೆಯಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ ಇರಿಸಲಾಗಿದ್ದ ಐಇಡಿಯನ್ನು ಡಿಫ್ಯೂಸ್ ಮಾಡಿದ್ದಾರೆ. ಉಗ್ರರು ಪೆಟ್ರೋಲ್ ಪಂಪ್ ಬಳಿಯ ರಸ್ತೆಯಲ್ಲಿ ಬಾಂಬ್ ಇರಿಸಿದ್ದರು. ಸ್ಫೋಟದ ತೀವ್ರತೆ ಹೆಚ್ಚಾಗುವ ಉದ್ದೇಶದಿಂದ ಪೆಟ್ರೋಲ್ ಪಂಪ್ ಸ್ಥಳವನ್ನು ಗುರುತಿಸಿರುವ ಸಾಧ್ಯತೆಗಳಿವೆ. ಸರಿಯಾದ ಸಮಯಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಐಇಡಿಯನ್ನು ಡಿಫ್ಯೂಜ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಟಿಕಲ್ 370 ರದ್ದುಗೊಳಿಸಿ ಆಗಸ್ಟ್ 5ಕ್ಕೆ ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಜಮ್ಮು ಕಾಶ್ಮೀರದಲ್ಲಿ ಎರಡು ದಿನ ಕರ್ಫ್ಯೂ ವಿಧಿಸಲಾಗಿದೆ. ಕಾಶ್ಮೀರ ಪ್ರತ್ಯೇಕವಾದಿಗಳಿಂದ ಪ್ರತಿಭಟನೆ ನಡೆಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕರ್ಫ್ಯೂ ಹಾಕಲಾಗಿದೆ. ೩೭೦ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ಆಗಸ್ಟ್‌ ೫ರಂದು ಒಂದು ವರ್ಷ ಪೂರ್ತಿಯಾಗುವ ಹಿನ್ನೆಲೆಯಲ್ಲಿ ಉಗ್ರವಾದಿಗಳು ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಹಾಕಲಿದ್ದಾರೆ ಎಂಬ ಬಗ್ಗೆ ಭಾರತದ ಇಂಟೆಲಿಜೆನ್ಸ್‌ ಈಗಾಗಲೇ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭದ್ರತಾ ಕ್ರಮವನ್ನು ಕಾಶ್ಮೀರದಲ್ಲಿ ತೀವ್ರಗೊಳಿಸಲಾಗಿತ್ತು.

Leave a Reply

Your email address will not be published. Required fields are marked *