ಪೊಲೀಸರ ಥಳಿತದಿಂದ ನೊಂದ ಬಾಲಕ ಆತ್ಮಹತ್ಯೆ!

ಮೈಸೂರು: ನಂಬರ್ ಪ್ಲೇಟ್ ಇಲ್ಲದ ಬೈಕ್ ಓಡಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಬಾಲಕನಿಗೆ ಪೊಲೀಸರು ಠಾಣೆಯಲ್ಲಿ ಥಳಿಸಿದ್ದು ಇದರಿಂದ ನೊಂದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಸುಣ್ಣದಕೇರಿಯಲ್ಲಿ ನಡೆದಿದೆ. ದರ್ಶನ್(17) ಸಾವಿಗೀಡಾದ ಬಾಲಕ.
ದರ್ಶನ್ ಬೈಕ್ ಓಡಿಸುವಾಗ ಪೊಲೀಸರು ತಡೆದು ವಾಹನವನ್ನು ವಶಕ್ಕೆ ಪಡೆದಿದ್ದರು. ಪೊಲೀಸ್ ಠಾಣೆಯಲ್ಲಿ ತಮ್ಮ ಮಗನಿಗೆ ಥಳಿಸಿದ್ದಾರೆ, ಇದರಿಂದ ಬೇಸರಗೊಂಡು ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಬೈಕ್ ತಪಾಸಣೆ ವೇಳೆ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದರು. ನಂತರ ಬಾಲಕ ಹಾಗೂ ಆತನ ಸ್ನೇಹಿತನನ್ನು ಮನೆಗೆ ಕಳುಹಿಸಿದ್ದರು. ಆದರೆ ಠಾಣೆಯಲ್ಲಿ ಆದ ಅವಮಾನ ಸಹಿಸಲಾಗದೆ ಮನೆಗೆ ಬಂದು ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕೆ.ಆರ್. ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.