ನೀರ್ ಮಾರ್ಗ ಪಂಚಾಯತ್ ನ ಸೊಳ್ಳೆ ಉತ್ಪಾದನಾ ಕೇಂದ್ರ!

ಮಂಗಳೂರು: ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ದೊಡ್ಡ ತೊಂದರೆ ಎಂದರೆ ಮಲೇರಿಯಾ, ಚಿಕುಂಗುನ್ಯಾ, ಡೆಂಗ್ಯೂವಿನಂಥ ಸಾಂಕ್ರಾಮಿಕ ರೋಗಗಳು. ಜಿಲ್ಲಾಡಳಿತ ಇವುಗಳಿಂದ ಜನರನ್ನು ರಕ್ಷಿಸಲು ಕಷ್ಟಪಡುತ್ತಿದ್ದರೆ ನೀರ್ ಮಾರ್ಗ ಗ್ರಾಮ ಪಂಚಾಯತ್ ಮಾತ್ರ ಪೆದಮಲೆ ಎಂಬಲ್ಲಿ ಎರಡು ಬೃಹತ್ತಾದ ಸಿಮೆಂಟ್ ತೊಟ್ಟಿಗಳನ್ನು ನಿರ್ಮಿಸಿ ಸೊಳ್ಳೆ ಉತ್ಪಾದನೆ ಮಾಡುತ್ತಿದೆ. ಇದರಲ್ಲಿ ಉತ್ಪಾದನೆಯಾಗುವ ಸೊಳ್ಳೆಗಳು ಕೇವಲ ನೀರ್ ಮಾರ್ಗ ಮಾತ್ರವಲ್ಲ ವಿದೇಶಕ್ಕೂ ರಫ್ತು ಮಾಡುವಷ್ಟಾಗಬಹುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೆದಮಲೆಯಲ್ಲಿ ಸ್ಥಳೀಯ ನಿವಾಸಿಯೊಬ್ಬರು ಜಾಗ ಪಡೆದು ಮನೆ ಕಟ್ಟಲು ಮುಂದಾಗಿದ್ದರು. ಅಷ್ಟರಲ್ಲಿ ಜಾಗದ ತಕರಾರು ಕೋರ್ಟ್ ಮೆಟ್ಟಿಲೇರಿದ್ದು ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೇ ನಿಂತಿದೆ. ಕಾಮಗಾರಿ ಸಂದರ್ಭ ಮಾಡಿದ್ದ ಎರಡು ದೊಡ್ಡ ತೊಟ್ಟಿಗಳು ಸದ್ಯ ಸೊಳ್ಳೆ ನಿರ್ಮಾಣ ಮಾಡುತ್ತಿವೆ. ಆಳವಾದ ಬಾವಿಯಂತಿದ್ದು ಮಕ್ಕಳಿಗೆ ಇದು ಅಪಾಯಕಾರಿಯಾಗಿದೆ. ಇನ್ನಾದರೂ ನೀರ್ ಮಾರ್ಗ ಗ್ರಾಮ ಪಂಚಾಯತ್ ಆಡಳಿತ, ಪಿಡಿಒ ಇತ್ತ ಗಮನಹರಿಸುವುದೊಳ್ಳೆಯದು. ಜಾಗಕ್ಕೆ ಸ್ಟೇ ಇರಬಹುದು, ಆದರೆ ಸೊಳ್ಳೆ ಉತ್ಪಾದಿಸಿ ರೋಗ ಹರಡುವ ಟ್ಯಾಂಕ್ ಮುಚ್ಚಲು ಯಾರು ಸ್ಟೇ ಮಾಡಿದ್ದಾರೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.