ಆಸ್ಪತ್ರೆ ಕಟ್ಟಡದಿಂದ ಹಾರಿದ ಪತ್ರಕರ್ತನಿಗೆ ಕೊಲೆ ಭೀತಿಯಿತ್ತೇ?

ನವದೆಹಲಿ: ಕೊರೊನಾ ಪಾಸಿಟವ್ ಆಗಿದ್ದ ಕಾರಣಕ್ಕೆ ಏಮ್ಸ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ ಪತ್ರಕರ್ತ ತರುಣ್ ಸಿಸೋಡಿಯಾ(37) ಸಾಯುವ ಕೆಲಹೊತ್ತಿನ ಮುನ್ನ ಪತ್ರಕರ್ತರ ವಾಟ್ಸಾಪ್ ಗ್ರೂಪ್ನಲ್ಲಿ ಕಳುಹಿಸಿದ್ದ ಸಂದೇಶ ಹಲವಾರು ಅನುಮಾಗಳಿಗೆ ಕಾರಣವಾಗಿದೆ. ಗ್ರೂಪ್ ಸಂದೇಶದಲ್ಲಿ ಪತ್ರಕರ್ತ ತನ್ನ ಕೊಲೆಯಾಗಬಹುದು ಎಂದು ಹೇಳಿಕೊಂಡಿದ್ದು ಆನಂತರ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ತರುಣ್ ಸಿಸೋಡಿಯಾ ಈಶಾನ್ಯ ದೆಹಲಿಯ ಭಜನ್ಪುರ ನಿವಾಸಿಯಾಗಿದ್ದು ಹಿಂದಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ನಿನ್ನೆ ಮಧ್ಯಾಹ್ನ 37 ವರ್ಷದ ಪತ್ರಕರ್ತ ತರುಣ್ ಸಿಸೋಡಿಯಾ ದೆಹಲಿಯ ಏಮ್ಸ್ ನ ಕೊರೊನಾ ವಾರ್ಡ್ನ ನಾಲ್ಕನೇ ಮಹಡಿಯಿಂದ ಹಾರಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತೀವ್ರ ನಿಗಾ ಘಟಕಕ್ಕೆ ಕರೆದೊಯ್ದರೂ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ. ಸಾಯುವ ಮೊದಲು ದೆಹಲಿ ಮೂಲದ ಪತ್ರಕರ್ತರ ಗುಂಪಿನಲ್ಲಿ ಸಂದೇಶ ಪೋಸ್ಟ್ ಮಾಡಿದ್ದು ನಾನು ಕೊಲೆಯಾಗಬಹುದು ಎಂದು ಬರೆದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಆಸ್ಪತ್ರೆಯ ನಿರ್ಲಕ್ಷ್ಯವನ್ನು ಸಿಸೋಡಿಯಾ ತಿಳಿಸಲು ಯತ್ನಿಸಿದ್ದು ತರುಣ್ ಸಾವಿನ ಬಗ್ಗೆ ಅಧಿಕೃತ ವಿಚಾರಣೆಯನ್ನು ತಕ್ಷಣ ರೂಪಿಸುವಂತೆ ಆರೋಗ್ಯ ಸಚಿವ ಹರ್ಷ್ ವರ್ಧನ್ ಏಮ್ಸ್ ನಿರ್ದೇಶಕರಿಗೆ ಆದೇಶಿಸಿದ್ದಾರೆ.
