ನೇತ್ರಾವತಿ’ಯಿಂದ ಹಾರಿದ್ದಾಗಿ ಪೊಲೀಸರನ್ನೇ `ಬೇಸ್ತು’ ಬೀಳಿಸಿದ ಭೂಪ ಶಿವಮೊಗ್ಗದಲ್ಲಿ ಪತ್ತೆ!

ಮಂಗಳೂರು: ಸಾಲಗಾರರ ಕಿರಿಕಿರಿ ತಾಳಲಾರದೆ ಉಳ್ಳಾಲ ಠಾಣಾ ವ್ಯಾಪ್ತಿಯ ಜೆಪ್ಪಿನಮೊಗರು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಲು ಬೈಕ್ ಅನ್ನು ಸೇತುವೆಯಲ್ಲಿ ನಿಲ್ಲಿಸಿ ಎಲ್ಲರನ್ನೂ `ಬೇಸ್ತು’ ಬೀಳಿಸಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ. ಮುಡಿಪು ಸಮೀಪದ ಕುರ್ನಾಡು ನಿವಾಸಿ ಪ್ರವೀಣ್ ಸಫಲ್ಯ(28) ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದು ಬೈಕ್ ಸೇತುವೆ ಮೇಲೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಮುಳುಗುತಜ್ಞರು ತೀವ್ರ ಶೋಧಕಾರ್ಯ ನಡೆಸುತ್ತಿದ್ದರು. ಆದರೆ ಇಂದು ಮುಂಜಾನೆ ಆತ ಶಿವಮೊಗ್ಗಕ್ಕೆ ತೆರಳಿರುವ ಮಾಹಿತಿ ಲಭಿಸಿದೆ.
ನಿನ್ನೆ ರಾತ್ರಿ 7.30 ಗಂಟೆಯ ಸುಮಾರಿಗೆ ಘಟನೆ ಬೆಳಕಿಗೆ ಬಂದಿತ್ತು. ಎಸ್.ಎಲ್.ಆರ್. ಪ್ರವೀಣ್ ಲಿಮಿಟೆಡ್ ಕಂಪೆನಿಯ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ಅವರು ಸ್ನೇಹಿತರ ಬಳಿ ಈ ವಿಚಾರ ತಿಳಿಸಿದ್ದರು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಲಗಾರರ ಕಾಟ ತಾಳಲಾರದೆ ಬೈಕ್ ಸೇತುವೆ ಮೇಲೆ ನಿಲ್ಲಿಸಿ ಶಿವಮೊಗ್ಗಕ್ಕೆ ತೆರಳಿದ್ದರು ಎನ್ನಲಾಗುತ್ತಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.