“ಅಣ್ಣಾಮಲೈ ಸಮಾಜಸೇವೆ ಮಾಡಲು ಬಿಜೆಪಿ ಸೇರಿದ್ದು ದೊಡ್ಡ ದುರಂತ” -ಮಿಥುನ್ ರೈ

ಮಂಗಳೂರು: ಕರ್ನಾಟಕ ರಾಜ್ಯ ಕಂಡ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಅಣ್ಣಾಮಲೈ ಅವರು ಪೊಲೀಸ್ ಸೇವೆಯಿಂದ ನಿರ್ಗಮಿಸಿ ಸಮಾಜಸೇವೆ ಹೆಸರಲ್ಲಿ ತುಳಿದ ದಾರಿ ಮಾತ್ರ ಸರಿಯಿಲ್ಲ. ಯಾಕೆಂದರೆ ಅವರ ಸೇವಾದಕ್ಷತೆ, ಕಾರ್ಯವೈಖರಿಯನ್ನು ನೋಡಿ ಅಭಿಮಾನಿಯಾಗಿದ್ದವನು ನಾನು. ನನ್ನಂತೆ ಅದೆಷ್ಟೋ ಮಂದಿಗೆ ಅಣ್ಣಾಮಲೈ ರೋಲ್ ಮಾಡೆಲ್ ಆಗಿದ್ದವರು. ಆದರೆ ಇತ್ತೀಚೆಗೆ ಅವರು ಬಿಜೆಪಿ ಸೇರಿದ್ದು ಮಾತ್ರ ದೊಡ್ಡ ದುರಂತ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಣ್ಣಾಮಲೈ ಅವರಿಗೆ ನಿಜವಾಗಿಯೂ ಸಮಾಜಸೇವೆ ಮಾಡುವ ಮನಸ್ಸಿದ್ದರೆ ರಾಜಕೀಯದಿಂದ ದೂರವಿದ್ದು ಮಾಡಬಹುದಿತ್ತು, ಅಥವಾ ಅದಕ್ಕಾಗಿ ಹೊಸ ಪಕ್ಷ ಕಟ್ಟಬಹುದಿತ್ತು. ಅವರಿಗೆ ಜನಬೆಂಬಲವಿದ್ದ ಕಾರಣ ಅದೇನೂ ಕಷ್ಟ ಆಗಿರಲಿಲ್ಲ. ಆದರೆ ಮೋದಿ ಜಪ ಮಾಡಿಕೊಂಡು ಬಿಜೆಪಿ ಸೇರಿದ್ದು ನೋಡಿದರೆ ಅವರು ಹಿಂದೆ “ದಕ್ಷ ಅಧಿಕಾರಿ” ಎಂದು ಕರೆಸಿಕೊಂಡಿದ್ದರ ಬಗ್ಗೆಯೇ ಸಂಶಯ ಪಡುವಂತಾಗಿದೆ ಎಂದು ಮಿಥುನ್ ರೈ ಹೇಳಿದ್ದಾರೆ.