ಆನ್‌ಲೈನ್‌ನಲ್ಲಿ ಹನಿಮೂನ್‌ ಆದ್ರೆ ಮಕ್ಕಳಾಗುತ್ತಾ? VTU ವಿದ್ಯಾರ್ಥಿಗಳ ಪರ ಪ್ರಥಮ್ ಬ್ಯಾಟಿಂಗ್!

ಕೊರೋನಾ ವೈರಸ್‌ ಜನರ ಬದುಕನ್ನೇ ಉಲ್ಟಾ ಪಲ್ಟಾ ಮಾಡಿದೆ. ಆನ್‌‌ಲೈನ್‌ ಶಾಪಿಂಗ್, ಬಿಲ್‌ ಪೇಮೆಂಟ್‌, ವರ್ಕ್‌ ಫ್ರಂ ಹೊಮ್‌ ಅಷ್ಟೇ ಯಾಕೆ ಆನ್‌ಲೈನ್‌ ಪಾಠನೂ ಶುರುವಾಗಿದೆ. ಶಾಲೆ, ಕಾಲೇಜಿನಲ್ಲಿ ಎಂಟು ಗಂಟೆಗಳ ಕಾಲ ಕುಳಿತು ಕೇಳುವ ಪಾಠವೇ ಆರ್ಥವಾಗದ ವಿದ್ಯಾರ್ಥಿಗಳಿಗೆ, ಇದೀಗ ಆನ್‌ಲೈನ್‌ನಲ್ಲಿ ಪಾಠ ಕೇಳಿಸಿಕೊಂಡು, ಪರೀಕ್ಷೆ ಬರೆಯಲು ಸಾಧ್ಯವೇ? ಭಾರತದಂಥ ದೇಶದಲ್ಲಿ ಇಂಟರ್ನೆಟ್ ವ್ಯವಸ್ಥೆ ನಗರ ಪ್ರದೇಶಗಳಲ್ಲಿಯೇ ಕಷ್ಟ, ಇನ್ನು ಹಳ್ಳಿ ಕಥೆ ಕೇಳ್ಬೇಕಾ? ಇಂಥ ಆನ್‌ಲೈನ್ ಶಿಕ್ಷಣದಿಂದ ಮತ್ತೆ ವಂಚಿತರಾಗುವುದು ಮತ್ತದೇ ಹಳ್ಳಿ ಮಕ್ಕಳು. 

ಇಂಥ ಬಡ, ಗ್ರಾಮೀಣ ಹಾಗೂ ಎಲ್ಲ ವಿಟಿಯು ವಿದ್ಯಾರ್ಥಿಗಳ ಪರ ಬ್ಯಾಟಿಂಗ್ ಮಾಡಿದ್ದಾರೆ ಒಳ್ಳೇ ಹುಡುಗ ಪ್ರಥಮ್. ವಿದ್ಯಾರ್ಥಿಗಳ ಪ್ರತಿನಿಧಿಯಾಗಿ, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರನ್ನು ಭೇಟಿಯಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಇರುವ ಎಲ್ಲ ಗೊಂದಲ ಹೋಗಲಾಡಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಅದೂ ಅಲ್ಲದೇ ಒಂದು ಸೆಮಿಸ್ಟರ್ ಪಠ್ಯವನ್ನು ತಾವೇ ಓದಿಕೊಂಡು, ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಕಷ್ಟವಾಗಿರುವುದರಿಂದ ಸಹಕರಿಸಿ, ವಿದ್ಯಾರ್ಥಿಗಳ ಭಯ ನಿವಾರಣೆ ಮಾಡಬೇಕೆಂದು ಪ್ರಥಮ್ ಮಾಡಿರುವ ಮನವಿಗೆ ಡಿಸಿಎಂ ಅಶ್ವಥ್ ನಾರಾಯಣ್ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಇರುವ ಪ್ರಥಮ್‌ ವಿದ್ಯಾರ್ಥಿಗಳ ಪರ ಮಾತನಾಡುವುದಕ್ಕೆ ಕಾರಣವಿದೆ. ಬೆಳಗ್ಗೆ- ರಾತ್ರಿ ಎನ್ನದೇ ವಿದ್ಯಾರ್ಥಿಗಳು ಮೆಸೇಜ್‌ ಮಾಡಿ ಮಾಡಿ, ಹೇಗಾದರೂ ಸಹಕರಿಸುವಂತೆ ಪ್ರಥಮ್‌ಗೆ ಆಗ್ರಹಿಸುತ್ತಿದ್ದರು. ಇದೇ ಆಗ್ರಹದಲ್ಲಿ ಇನ್‌ಬಾಕ್ಸ್ ತುಂಬಿ ಹೋದ ಕಾರಣ, ಪ್ರಥಮ್ ಕಷ್ಟಕ್ಕೆ ನೆರವಾಗಲು ಮುಂದಾದರು. ಈ ನಿಟ್ಟಿನಲ್ಲಿ ಹಲವರ ಸಲಹೆಗಳನ್ನು ಪಡೆದೇ ಒಳ್ಳೇ ಹುಡುಗ ಒಂದೊಳ್ಳೆ ಹೆಜ್ಜೆ ಇಟ್ಟಿದ್ದಾರೆ. ಆ ಕಾರಣದಿಂದಲೇ ಡಿಸಿಎಂ ಅವರ ಮನವೊಲಿಸಲು ಅವರಿಗೆ ಅನುಕೂಲವಾಯಿತು. 

ಏನೆಲ್ಲಾ ಸಮಸ್ಯೆ?
ಪ್ರತಿ ದಿನ ಕಾಲೇಜ್‌ಗೆ ಹೋಗಿ ಟೀಚರ್‌ ಮುಂದೆ ಪಾಠ ಮಾಡಿದರೇ, ಸ್ವಲ್ಪ ಐಕ್ಯೂ ಕಡಿಮೆ ಇರೋ ಮಕ್ಕಳಿಗೆ ಅರ್ಥವಾಗುವುದು ಕಷ್ಟ. ಅಂದಮೇಲೆ ಇನ್ನು ಆನ್‌ಲೈನ್‌ ಕ್ಲಾಸ್‌ ಕೇಳಿ ಪರೀಕ್ಷೆ ಬರೆದ್ರೆ ದೇವ್ರಿಗೆ ಪ್ರೀತಿ! ಹಳ್ಳೀಲಿ ನೆಟ್‌ವರ್ಕ್‌ ಸಮಸ್ಯೆ ಇರುತ್ತದೆ. ಆಗ ಪಾಠ ಕೇಳುವುದಾದರೂ ಹೇಗೆ? ಅಲ್ಲದೇ ಸ್ಕ್ರೀನಿಂಗ್ ಟೈಮ್ ಹೆಚ್ಚು ಮಾಡುವ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಥೆ ಏನು? ಎಂಬೆಲ್ಲ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸಮಸ್ಯೆಗಳನ್ನು ಅನುಭವಿಸಿದವರನ್ನು ನೋಡಿರುವ ಪ್ರಥಮ್  ಆನ್‌ಲೈನ್‌ನಲ್ಲಿ ಹನಿಮೂನ್‌ ಆದ್ರೆ ಮಕ್ಕಳಾಗುತ್ತಾ, ಎನ್ನುವ ಮೂಲಕ ಮಕ್ಕಳ ಸಮಸ್ಯೆಯನ್ನು ಅರ್ಥ ಮಾಡಿಸಿದ್ದಾರೆ. 

ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಇದೆ  ಅಂತ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಾಲಾ ಕಾಲೇಜುಗಳು ನಿರ್ಧರಿಸಿದ್ದೇನೋ ಸರಿ. ಆದರೆ ಇದನ್ನು ಹಳ್ಳೀಲಿ ಅನ್ವಯ ಮಾಡಿದರೆ ಮಕ್ಕಳು ಏನು ಮಾಡಬೇಕು? ಎಂಬುವುದು ಪ್ರಥಮ್‌ ಪ್ರಶ್ನೆ. ಕೆಲವರಿಗೆ ನೆಟ್‌ವರ್ಕ್‌ ಸಿಗುವುದಿಲ್ಲ ಹೇಗೆ ಪರೀಕ್ಷೆ ನಿಗದಿತ ಅವಧಿಯಲ್ಲಿ ಬರೆಯುವುದಕ್ಕೆ ಸಾಧ್ಯ? ಎಂಬ ವಿದ್ಯಾರ್ಥಿಗಳ ನೈಜ ಕಳಕಳಿಯನ್ನು ಪ್ರಥಮ್, ಸಚಿವರ ಮುಂದಿಟ್ಟಿದ್ದಾರೆ.

ತಜ್ಞರೊಂದಿಗೆ ಚರ್ಚೆ:
ವಿದ್ಯಾರ್ಥಿಗಳ ಪರ ಇರುವ ಪ್ರಥಮ್‌ IAS ಅಧಿಕಾರಿಗಳ ಜೊತೆ ಮಾತನಾಡಿ, ಕ್ಲಾರಿಫಿಕೇಷನ್ಸ್ ಪಡೆದು ಕೊಂಡಿದ್ದರು. ನಂತರ ಡಿಸಿಎಂ ಅಶ್ವಥ್‌ನಾರಾಯಣ್‌ ಜೊತೆ ಮಾತನಾಡಿ, ತಮ್ಮ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಜೂನ 1ರಲ್ಲಿ ನಿರ್ಧಾರ ತಿಳಿಸುವುದಾಗಿ ಪ್ರಥಮ್‌‌ಗೆ ಸಚಿವರು ಭರವಸೆ ನೀಡಿದ್ದಾರೆ.

’10ನೇ ಕ್ಲಾಸ್‌ ಹಾಗೂ ಪಿಯುಸಿ ಅವರನ್ನು ಯಾವುದೇ ಕಾರಣಕ್ಕೂ ಪ್ರಮೋಟ್‌ ಮಾಡುವುದಿಲ್ಲ. ತಲೆ ಬಗ್ಗಿಸಿ ಓದಿ. ಡಿಗ್ರಿ ಹಾಗೂ ವಿಟಿಯು ವಿದ್ಯಾರ್ಥಿಗಳು ಜೂನ್‌‌ವರೆಗೂ ಕಾಯಬೇಕಿದೆ,’ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಪ್ರಥಮ್‌ಗೆ ಮೆಸೇಜ್‌ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಗ್ಗಟ್ಟಾಗಿದ್ದಾರೆ. ಎಲ್ಲರೂ ಮೆಸೇಜ್‌ ಮಾಡಿ ಪಾಸ್ ಮಾಡಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ, ಕಷ್ಟಪಟ್ಟು ಓದಿ, ಎಕ್ಸಾಂ ಬೆರೆಯುತ್ತೇವೆ ಎಂಬ ಭರವಸೆ ಮಾತ್ರ ನೀಡಿಲ್ಲ..

<[RZP]>

Leave a Reply

Your email address will not be published. Required fields are marked *